ಧಾರವಾಡ: ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದಾಗಿ ಎಲ್ಪಿಜಿ ಸಿಲಿಂಡರ್ ಅಭಾವ ಹೆಚ್ಚಾಗಿದೆ. ಸಿಲಿಂಡರ್ಗಳ ಅಲಭ್ಯತೆಯ ಎಫೆಕ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ಗೂ ತಟ್ಟಿದೆ. ಧಾರವಾಡದ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಗ್ರಾಹಕರಿಗೆ ಮೊಸರನ್ನ ಮಾತ್ರ ವಿತರಿಸಿದ್ದಾರೆ.
ಇಂದಿನ ಮೆನ್ಯೂ ಪ್ರಕಾರ ಅನ್ನ-ಸಾಂಬಾರ್, ರೊಟ್ಟಿ ನೀಡಬೇಕಾಗಿತ್ತು. ಆದರೆ ಮಧ್ಯಾಹ್ನ ಮೊಸರನ್ನ ಮಾತ್ರ ನೀಡಲಾಗಿದೆ. ಇಂದು ಸಂಜೆ ಊಟ ಸಿಗುವುದೇ ಅನುಮಾನವಾಗಿದೆ. ಈಗಾಗಲೇ ಇದ್ದಂತಹ ನಾಲ್ಕು ಸಿಲಿಂಡರ್ ಖಾಲಿಯಾಗಿದ್ದು, ಸಿಲಿಂಡರ್ ಸಿಗದೇ ಹೋದ್ರೆ ರಾತ್ರಿ ಊಟ ಮಾತ್ರ ಅನುಮಾನ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ.
ರಾತ್ರಿ ಅಡುಗೆ ಮಾಡಲು ಅಲ್ಲಿನ ಸಿಬ್ಬಂದಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ತರಕಾರಿ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಸಿಲಿಂಡರ್ ಸಿಕ್ಕರೆ ಮಾತ್ರ ರಾತ್ರಿ ಅಡುಗೆ ತಯಾರಾಗುತ್ತದೆ. ಮಧ್ಯಾಹ್ನ ಮಾಡಿರುವ ಮೊಸರನ್ನ ಕೂಡ ಬೇಗನೇ ಖಾಲಿಯಾಗಿದೆ. ನಿತ್ಯವೂ ಇಲ್ಲಿ ಸುಮಾರು 500 ಜನ ಊಟ ಮಾಡಿ ತಮ್ಮ ಹಸಿವು ನೀಗಿಸಿಕೊಳ್ಳುತ್ತಿದ್ದರು.
ಡಿಸಿಗೆ ಮನವಿ : ಮತ್ತೊಂದೆಡೆ, ಹಾವೇರಿ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 10 ರೂಪಾಯಿಗೆ ಅನ್ನ-ಸಾಂಬಾರ್ ಮತ್ತು 20 ರೂಪಾಯಿಗೆ ಚಪಾತಿ, ಪಲ್ಯ ಮತ್ತು ಅನ್ನ-ಸಾಂಬಾರ್ ನೀಡಲಾಗುತ್ತಿದೆ. ಪ್ರತಿ ಎರಡು ದಿನಕ್ಕೊಮ್ಮೆ ಸಿಲಿಂಡರ್ ಖಾಲಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಾವು ಮೇಲಾಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಈ ಕುರಿತಂತೆ ಮನವಿ ಸಲ್ಲಿಸಿದ್ದೇವೆ. ಸದ್ಯ ಯಾವುದೇ ಕೊರತೆ ಇಲ್ಲ, ಆದರೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಾರದು ಎನ್ನುವ ಕಳಕಳಿಯಿಂದ ನಾವು ಮನವಿ ಮಾಡಿದ್ದೇವೆ. ಅಡುಗೆ ಅನಿಲ ಇರುವವರೆಗೆ ಬಡವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುತ್ತೇವೆ.
ಇದು ಸಿಎಂ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗೆ ಸಾಕಷ್ಟು ಫಲಾನುಭವಿಗಳಿದ್ದಾರೆ. ಹಾವೇರಿ ಕ್ಯಾಂಟೀನ್ ಒಂದರಲ್ಲಿ ದಿನನಿತ್ಯ 450ಕ್ಕೂ ಅಧಿಕ ಜನ ಊಟ ಮತ್ತು ತಿಂಡಿ ಸವಿಯುತ್ತಿದ್ದಾರೆ. ಒಂದು ವೇಳೆ ಸಿಲಿಂಡರ್ ಸಿಗದಿದ್ದರೆ ನಾವು ಕ್ಯಾಂಟೀನ್ ಬಂದ್ ಮಾಡಬೇಕಾಗುತ್ತದೆ ಎನ್ನುತ್ತಾರೆ ಕ್ಯಾಂಟೀನ್ ಸಿಬ್ಬಂದಿ ಪ್ರದೀಪ್.
ಹಾವೇರಿಯ ಪಶು ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಜನರ ಹಸಿವು ತಣಿಸುತ್ತಿದೆ. ಈ ಕೇಂದ್ರದ ಸಮೀಪವರೇ ಜಿಲ್ಲಾಸ್ಪತ್ರೆ ಇದೆ. ಬಸ್ ನಿಲ್ದಾಣ, ಹೆಸ್ಕಾಂ ಕಚೇರಿ, ಕೆಎಂಎಫ್, ಆಟೋ ಸ್ಟ್ಯಾಂಡ್ ಇದೆ. ಇಲ್ಲಿಗೆ ಬರುವ ಬಹುತೇಕ ಬಡವರು ಈ ಕ್ಯಾಂಟೀನ್ ಊಟ, ಉಪಹಾರ ಸೇವಿಸುತ್ತಿದ್ದಾರೆ. ಇವರಿಗೆ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲಾಗುತ್ತದೆ. ಸುತ್ತಮುತ್ತ ಗ್ರಾಮಗಳ ಕಚೇರಿ ಕೆಲಸಕ್ಕೆ ಬರುವ ಗ್ರಾಮಸ್ಥರು ಇಲ್ಲಿಯೇ ತಮ್ಮ ಹಸಿವು ನೀಗಿಸಿಕೊಳ್ಳುತ್ತಾರೆ. ಸಿಲಿಂಡರ್ ಇಲ್ಲ ಎಂದು ಕ್ಯಾಂಟೀನ್ ಬಂದ್ ಮಾಡಬಾರದು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.