ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸುರಕ್ಷತೆಗೆ ಆದ್ಯತೆ; 7 ಕೋಟಿ ರೂ. ವೆಚ್ಚದಲ್ಲಿ ಎಐ ಕ್ಯಾಮರಾಗಳ ಅಳವಡಿಕೆ
ಕ್ರಿಕೆಟ್ ಅಭಿಮಾನಿಗಳ ಸುರಕ್ಷತೆಯ ದೃಷ್ಟಿಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಬೆಂಗಳೂರು : ನಮ್ಮ ಗುರಿ ಸ್ಪಷ್ಟವಾಗಿದ್ದು, ಕಳೆದ. ಆವೃತ್ತಿಯನ್ನು ನಾವು ಹೇಗೆ ಮುಗಿಸಿದ್ದೆವೋ ಅದೇ ರೀತಿ ಈ ಸೀಸನ್ನ್ನು ಆರಂಭಿಸಲಿದ್ದೇವೆ. ಸದ್ಯ ನಮ್ಮ ಪೂರ್ಣ ಗಮನ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದ ಮೇಲಿದೆ ಎಂದು ಆರ್ಸಿಬಿ ತಂಡದ ನಿರ್ದೇಶಕ ಮೊ ಬೊಬಾಟ್ ತಿಳಿಸಿದ್ದಾರೆ. ಮಂಗಳವಾರ ನಡೆದ ಪೂರ್ವ ಸಿದ್ಧತಾ ಮಾಧ್ಯಮಗೋಷ್ಟಿಯಲ್ಲಿ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಯಶ್ ದಯಾಳ್ ಅಲಭ್ಯ: ವೈಯಕ್ತಿಕ ಕಾರಣಗಳಿಂದಾಗಿ ಯಶ್ ದಯಾಳ್ ಸದ್ಯಕ್ಕೆ ತಂಡವನ್ನು ಸೇರಿಕೊಳ್ಳುತ್ತಿಲ್ಲ ಎಂದು ಬೊಬಾಟ್ ಖಚಿತಪಡಿಸಿದರು. ಇನ್ನು ಅನುಭವಿ ವೇಗಿ ಜೋಶ್ ಹೇಜಲ್ವುಡ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದು, ಅವರ ಲಭ್ಯತೆ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ತಂಡವು ನಿರಂತರ ಸಂಪರ್ಕದಲ್ಲಿದೆ. ಫಿಟ್ನೆಸ್ ಸಾಬೀತಾದ ತಕ್ಷಣ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಹೈಟೆಕ್ ಭದ್ರತೆ ಮತ್ತು ಪ್ರೇಕ್ಷಕರ ನಿರ್ವಹಣೆಗಾಗಿ 7 ಕೋಟಿ ರೂ ಹೂಡಿಕೆ: ಅಭಿಮಾನಿಗಳಿಗೆ ತಡೆರಹಿತ ಅನುಭವ ನೀಡಲು ಆರ್ಸಿಬಿ ಫ್ರಾಂಚೈಸಿ ಸುಮಾರು 7 ಕೋಟಿ ರೂ. ಹೂಡಿಕೆ ಮಾಡಿದೆ ಎಂದು ತಂಡದ ಸಿಇಒ ರಾಜೇಶ್ ಮೆನನ್ ತಿಳಿಸಿದರು. " ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಜನಸಂದಣಿಯನ್ನು ನಿರ್ವಹಿಸಲು 'ಜಾರ್ವಿಸ್' ಎಂಬ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಿಸಿಟಿವಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು ನೈಜ ಸಮಯದಲ್ಲಿ ಪೊಲೀಸ್ ಆಯುಕ್ತರ ಕಚೇರಿಗೆ ಮಾಹಿತಿ ನೀಡಲಿದೆ ಎಂದು ಮೆನನ್ ಮಾಹಿತಿ ನೀಡಿದರು.
ಅಭ್ಯಾಸದಲ್ಲಿ 11 ನಂಬರ್ ಜೆರ್ಸಿ : ತವರಿನಲ್ಲಿ ನಡೆಯಲಿರುವ ಮೊದಲ ಪಂದ್ಯದ ಅಭ್ಯಾಸದ ಅವಧಿಯಲ್ಲಿ ಆರ್ಸಿಬಿ ಆಟಗಾರರೆಲ್ಲರೂ ಜೆರ್ಸಿ ಸಂಖ್ಯೆ 11 ಧರಿಸುವ ಮೂಲಕ ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಮೆನನ್ ಅವರು ತಿಳಿಸಿದರು. ಇದಲ್ಲದೆ ಮೃತರ ಸ್ಮರಣಾರ್ಥವಾಗಿ ಪಂದ್ಯದ ಸಮಯದಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಖಾಲಿ ಇಡಲಾಗುವುದು. ಹಾಗೂ ಗೌರವ ಸೂಚಕವಾಗಿ ಆಟಗಾರರು ಪಂದ್ಯದ ವೇಳೆ ಕಪ್ಪು ತೋಳುಪಟ್ಟಿ ಧರಿಸಲಿದ್ದಾರೆ ಎಂದು ಅವರು ಹೇಳಿದರು.
"ಇದು ನಮ್ಮ ಅಭಿಮಾನಿಗಳಿಗೆ ಸಲ್ಲಿಸುವ ಗೌರವ. ಅವರು ಯಾವಾಗಲೂ ನಮ್ಮ ಸುದೀರ್ಘ ಪ್ರಯಾಣದ ಅವಿಭಾಜ್ಯ ಅಂಗವಾಗಿ ಉಳಿಯುತ್ತಾರೆ," ಎಂದು ರಾಜೇಶ್ ಮೆನನ್ ಮಾಧ್ಯಮಗೋಷ್ಟಿಯಲ್ಲಿ ವಿವರಿಸಿದರು.