ಭಾರತ ಸೇರಿದಂತೆ ಈ ದೇಶಗಳಿಗೆ ಹಾರ್ಮುಜ್ ಜಲಸಂಧಿ ಮುಕ್ತ: ಇರಾನ್ ಮಹತ್ವದ ಘೋಷಣೆ
ನಮ್ಮ ಸ್ನೇಹಿತ ದೇಶಗಳಿಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದ್ದೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ತಿಳಿಸಿದ್ದಾರೆ.
ಮುಂಬೈ (ಮಹಾರಾಷ್ಟ್ರ): ಭಾರತ ಸೇರಿದಂತೆ ನಮ್ಮ ಸ್ನೇಹಪರ ದೇಶಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರಕ್ಕೆ ನಾವು ಅನುಮತಿ ನೀಡಿದ್ದೇವೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಸ್ಪಷ್ಟಪಡಿಸಿದ್ದಾರೆ.
ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಗುರುವಾರ ಮಹತ್ವದ ಪೋಸ್ಟ್ ಮಾಡಿದೆ.
ಭಾರತ ಸೇರಿದಂತೆ ಈ ದೇಶಗಳಿಗೆ ಹಾರ್ಮುಜ್ ಜಲಸಂಧಿ ಮುಕ್ತ: ಈ ಪೋಸ್ಟ್ನಲ್ಲಿ ಚೀನಾ, ರಷ್ಯಾ, ಭಾರತ, ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ಸ್ನೇಹಪರ ದೇಶಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಗೆ ನಾವು ಅನುಮತಿ ನೀಡಿದ್ದೇವೆ ಎಂದು ಸಚಿವ ಅಬ್ಬಾಸ್ ಅರಘ್ಚಿ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಕರೆ ನೀಡಿದ ಬಳಿಕ ಈ ನಿರ್ಧಾರ ಹೊರಬಂದಿದೆ.
ಎಕ್ಸ್ನಲ್ಲಿ ಪೋಸ್ಟ್ನಲ್ಲಿ ಗುಟೆರಸ್ ಅವರು, ಹಾರ್ಮುಜ್ ಜಲಸಂಧಿಯನ್ನು ದೀರ್ಘಕಾಲದವರೆಗೆ ಮುಚ್ಚಿದರೆ ಜಾಗತಿಕ ಬಿತ್ತನೆಯ ಋತುವಿನ ಸಂದರ್ಭದಲ್ಲಿ ತೈಲ, ಅನಿಲ ಮತ್ತು ರಸಗೊಬ್ಬರಗಳ ಚಲನೆಯನ್ನೇ ಉಸಿರುಗಟ್ಟಿಸಿದಂತಾಗುತ್ತದೆ. ಇದು ಈ ಪ್ರದೇಶ ಮತ್ತು ಅದರಾಚೆಗಿನ ಜನರಿಗೆ ಗಂಭೀರ ಹಾನಿ ಮಾಡುತ್ತದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪಶ್ಚಿಮ ಏಷ್ಯಾ ಯುದ್ಧ ಕೊನೆಗೊಳಿಸುವಂತೆಯೂ ಗುಟೆರೆಸ್ ಅಮೆರಿಕ ಮತ್ತು ಇಸ್ರೇಲ್ ದೇಶಗಳನ್ನು ಒತ್ತಾಯಿಸಿದ್ದಾರೆ. ಮಾನವ ಸಂಕಟ ತೀವ್ರಗೊಳ್ಳುತ್ತಿದೆ. ಸಾವು-ನೋವುಗಳು ಹೆಚ್ಚುತ್ತಿವೆ. ಜಾಗತಿಕ ಆರ್ಥಿಕ ಪರಿಣಾಮ ಹೆಚ್ಚೆಚ್ಚು ವಿನಾಶಕಾರಿಯಾಗುತ್ತಿದೆ. ಹಾಗಾಗಿ, ಯುದ್ಧ ಕೊನೆಗೊಳಿಸುವ ಸಮಯವಿದು. ಸಂಘರ್ಷದಲ್ಲಿ ಪಾತ್ರವಿಲ್ಲದ ತಮ್ಮ ನೆರೆಹೊರೆಯವರ ಮೇಲೆ ದಾಳಿ ನಿಲ್ಲಿಸಬೇಕು ಎನ್ನುವುದು ಇರಾನ್ಗೆ ನನ್ನ ಸಂದೇಶ ಎಂದು ಗುಟೆರಸ್ ಮನವಿ ಮಾಡಿದ್ದಾರೆ.