ಸೋಮವಾರ ರಾಜ್ಯದ ಹಲವೆಡೆ ಗುಡುಗು ಸಿಡಿಲಿನೊಂದಿಗೆ ಸುರಿದ ಅಕಾಲಿಕ ಮಳೆ ತಂಪೆರೆಯಿತು. ಹಾಸನ, ಕೊಪ್ಪಳ, ದಾವಣಗೆರೆ, ವಿಜಯನಗರ ಸೇರಿದಂತೆ ರಾಜ್ಯದ ವಿವಿಧೆಡೆ ದಿಢೀರ್ ಮಳೆ ಸುರಿಯಿತು.
ಹಾಸನ/ಕೊಪ್ಪಳ/ದಾವಣಗೆರೆ/ವಿಜಯನಗರ/: ರಾಜ್ಯದ ಹಲವೆಡೆ ಸೋಮವಾರ ಸಂಜೆ ಮಳೆ ಆಗಿದೆ. ಗುಡುಗು, ಸಿಡಿಲು ಹಾಗೂ ಆಲಿಕಲ್ಲು ಸಹಿತ ಬೇಸಿಗೆ ಮಳೆ ಸುರಿದಿದೆ. ಬಿಸಿಲಿನ ಬೇಗೆಯಿಂದ ಪರಿತಪಿಸುತ್ತಿದ್ದ ಜನರಿಗೆ ಮಳೆ ತಂಪೆರೆಯಿತು.
ಹಾಸನದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು. ಇದರಿಂದ ಹಾಸನದ ರಸ್ತೆಗಳಲ್ಲಿ ಹಿಮಪಾತವಾದಂತಹ ದೃಶ್ಯ ಕಂಡುಬಂದಿತು. ಕೊಪ್ಪಳದಲ್ಲಿ ಸಿಡಿಲಿಗೆ ಬಾಲಕನೊಬ್ಬ ಬಲಿಯಾದ ಘಟನೆ ನಡೆದರೆ, ಕೆಲವೆಡೆ ಬೆಳೆಗಳಿಗೆ ಹಾನಿಯುಂಟುಮಾಡಿದೆ. ಇನ್ನು ವಿಜಯನಗರ ಜಿಲ್ಲೆಯ ಕಾನಾಹೊಸಹಳ್ಳಿ ಸಮೀಪದ ಯಂಬಳ್ಳಿ ಗ್ರಾಮದಲ್ಲಿ ಪವನ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದ ಘಟನೆ ನಡೆಯಿತು.
ಹಾಸನದಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆ: ಹಿಂದೂಗಳ ನೂತನ ವರ್ಷ ಯುಗಾದಿ ಇನ್ನೂ ನಾಲ್ಕು ದಿನ ಇರುವಾಗಲೇ ಹಾಸನಕ್ಕೆ ಮಳೆ ಆಗಮನವಾಗಿದೆ. ಬಿರು ಬಿಸಿಲಿನಲ್ಲಿ ಬಳಲಿದ್ದ ಜನರಿಗೆ ಸೋಮವಾರ ಭರ್ಜರಿ ಮಳೆ ಸುರಿದು, ಇಳೆಗೂ ಮತ್ತು ಜನರಿಗೆ ತಂಪೆರೆಯಲಿದೆ.
ಯುಗಾದಿ ಮಾಮರ ಚಿಗುರೊಡೆಯುವ ಕಾಲ. ಕೃಷಿ ಚಟುವಟಿಕೆಗಳು ಆರಂಭವಾಗುವ ಸಮಯ. ಹಾಸನದಲ್ಲಿ ಬೆಳ್ಳಗೆಯಿಂದಲೂ ರಣಬಿಸಿಲು ಜನರ ನತ್ತಿಯನ್ನ ಸುಡುತ್ತಿತ್ತು. ಸಂಜೆಗೆ ಜೋರು ಬಿರುಗಾಳಿ ಮತ್ತು ಗುಡುಗು ಸಹಿತ ಸುರಿದ ಮಳೆಗೆ ವಾತಾವರಣ ತಂಪಾಯಿತು.
ನಗರದ ಕೆಳಗಡೆ ಆಲಿಕಲ್ಲು: ಜೋರು ಮಳೆಯ ಮಧ್ಯೆ ಆಲಿಕಲ್ಲು ಮಳೆ ಬಿದ್ದಿತು. ಗುಡುಗು ಸಹಿತ ಮಳೆಯಲ್ಲಿ ಮೋಡಗಳಿಂದ ಬೀಳುತ್ತಿದ್ದ ಆಲಿಕಲ್ಲುಗಳನ್ನು ಕಂಡು ಖುಷಿಯಾದರು. ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಆಲಿಕಲ್ಲು ಮಳೆಯಾದರೆ ಬೆಳೆಗಳಿಗೆ ತೊಂದರೆ ಹೆಚ್ಚು. ರೈತರು ಕೃಷಿ ಒಕ್ಕಣೆ ಮಾಡಿ, ಬೆಳೆಗಳನ್ನು ಮಾರಾಟ ಮಾಡಿದ್ದರಿಂದ ಕೃಷಿಗೆ ಯಾವುದೇ ತೊಂದರೆಯಾಗಲಿಲ್ಲ. ಆದರೆ, ಈ ವರ್ಷ ಯುಗಾದಿ ಮೊದಲೇ ಮಳೆಯಾಗುತ್ತಿರುವುದರಿಂದ ಬೆಳೆಯು ಉತ್ತಮವಾಗಿರುತ್ತದೆ ಎಂಬುದು ಕೃಷಿಕರ ಬಲವಾದ ನಂಬಿಕೆಯಾಗಿದೆ. ಈ ಬಾರಿ ಯುಗಾದಿ ಮತ್ತು ರಂಜಾನ್ ಒಟ್ಟೊಟ್ಟಿಗೆ ಬಂದಿರುವುದು ಹೊಸ ವರ್ಷ ಎಲ್ಲರಿಗೂ ಒಳಿತನ್ನ ಉಂಟುಮಾಡಲಿ ಎನ್ನುತ್ತಾರೆ ಕೃಷಿಕ ನಂದೀಶ.
ಕೊಪ್ಪಳದಲ್ಲಿ ಸಿಡಿಲಿಗೆ ಯುವಕ ಬಲಿ: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಎನ್. ಜರಕುಂಟಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಮಂಜುನಾಥ್ ಗೌಡ್ರ (15) ಮೃತಪಟ್ಟ ಯುವಕನಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾವಣಗೆರೆಯಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆ: ಯುಗಾದಿಗೆ ಮುನ್ನವೇ ದಾವಣಗೆರೆಯಲ್ಲಿ ಸೋಮವಾರ ರಾತ್ರಿ ವರ್ಷದ ಮೊದಲ ಮಳೆಯ ಸಿಂಚನವಾಯಿತು. ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ತಂಪೆರೆಯಿತು. ಸಾಮಾನ್ಯವಾಗಿ ಯುಗಾದಿ ನಂತರ ಮಳೆಯ ಸಿಂಚನವಾಗುತ್ತಿತ್ತು. ಯುಗಾದಿ ಮಾರನೇ ದಿನ ಹೊನ್ನಾರು ಹೂಡಿ ವರ್ಷದ ಮೊದಲ ಬೇಸಾಯ ಆರಂಭಿಸುತ್ತಿದ್ದರು. ಈ ವರ್ಷ ಯುಗಾದಿ ಮುನ್ನವೇ ಮಳೆ ಸುರಿದು ಹೊನ್ನಾರು ಹೂಡುವಂತಾಗಿದೆ. ಸುಮಾರು 8.45ರ ವೇಳೆಗೆ ಅರಂಭವಾದ ಮಳೆ ಗುಡುಗು, ಸಿಡಿಲು ಸಹಿತ 1 ಗಂಟೆಗೂ ಅಧಿಕ ಕಾಲ ಸುರಿಯಿತು. ರಸ್ತೆ ತುಂಬೆಲ್ಲ ನೀರು ಹರಿಯಿತು. ದಾವಣಗೆರೆ ತಾಲೂಕು ಸುತ್ತಮುತ್ತ ಗ್ರಾಮಾಂತರ ಪ್ರದೇಶದಲ್ಲೂ ಆಲಿಕಲ್ಲು ಮಳೆಯಾಯಿತು. ಶಿರಮಗೊಂಡನಹಳ್ಳಿ, ಆರನೇಕಲ್ಲು, ಹದಡಿ, ಕುಕ್ಕವಾಡ ಸೇರಿದಂತೆ ಹಲವೆಡೆ ಮಳೆಯಾಗಿಯಿತು. ಗುಡುಗು ಮಿಂಚು ಸಹಿತ ಬಿದ್ದ ಆಲಿಕಲ್ಲು ಮಳೆಯಿಂದ ಸಾರ್ವಜನಿಕರು, ವಾಹನ ಸವಾರರು ತೊಂದರೆಗೀಡಾದರು. ಸುಮಾರು ಒಂದು ಗಂಟೆಯಿಂದ ಸುರಿದ ಮಳೆಯಲ್ಲಿ ಜನ ಆಲಿಕಲ್ಲು ಆರಿಸಲು ಮುಗಿಬಿದ್ದರು.
ವಿಜಯನಗರ - ಸಿಡಿಲು ಬಡಿದು ಹೊತ್ತಿ ಉರಿದ ವಿಂಡ್ ಫ್ಯಾನ್: ಪವನ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿದಿರುವ ಘಟನೆ ವಿಜಯನಗರ ಜಿಲ್ಲೆಯ ಕಾನಾಹೊಸಹಳ್ಳಿ ಸಮೀಪದ ಯಂಬಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಯಂಬಳಿ ಸಮೀಪ ಖಾಸಗಿ ಜಮೀನಿನಲ್ಲಿ ಅಳವಡಿಸಿದ್ದ ಖಾಸಗಿ ಕಂಪನಿಯ ವಿಂಡ್ ಫ್ಯಾನ್ಗೆ ಬಡಿಲು ಬಡಿದು ಹೊತ್ತಿ ಉರಿದಿದ್ದು, ದಟ್ಟ ಹೊಗೆ ಆವರಿಸಿಕೊಂಡಿತು. ಸಮೀಪಕ್ಕೆ ಸ್ಥಳೀಯರನ್ನು ಬಿಡದಂತೆ ಕಂಪನಿಯವರು ತಡೆದರು. ಪವನ ವಿದ್ಯುತ್ ಯಂತ್ರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸ್ಥಳಕ್ಕೆ ಕೂಡ್ಲಿಗಿಯ ಅಗ್ನಿಶಾಮಕ ದಳದವರು ಆಗಮಸಿ ಪರಿಶೀಲನೆ ನಡೆಸಿದ್ದಾರೆ.
ಕಾನಾಹೊಸಹಳ್ಳಿ ಹೋಬಳಿಯಾದ್ಯಂತ ಸಿಡಿಲು ಗುಡುಗು ಸಹಿತ ಸಾಧಾರಣ ಮಳೆಯಾಗಿದ್ದು, ಇದರಿಂದ ರೈತಾಪಿ ವರ್ಗ ಜಾನುವಾರುಗಳಿಗೆ ಮೇವು ಹಾಗೂ ಕಟಾವು ಮಾಡಿದ್ದ ರಾಗಿಯನ್ನು ರಕ್ಷಿಸಿಕೊಳ್ಳಲು ಪರದಾಡಿದರು.