ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿರುವ ಮಕ್ಕಳಿಗೆ ಸಾಮಾಜಿಕ ಮತ್ತು ಕೌಟುಂಬಿಕ ಹೊಣೆಗಾರಿಕೆ ಎಚ್ಚರಿಸುವ ಮಸೂದೆಯನ್ನು ತೆಲಂಗಾಣ ಸರ್ಕಾರ ಪರಿಚಯಿಸಿದೆ.
ಹೈದರಾಬಾದ್(ತೆಲಂಗಾಣ): ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ಬಾಧ್ಯತೆಯ ಮಸೂದೆಯೊಂದಕ್ಕೆ ಅನುಮೋದನೆ ನೀಡಿದೆ. ವಯಸ್ಸಾದ ತಂದೆ-ತಾಯಿಯನ್ನು ಪೊರೆಯದ ಮಕ್ಕಳಿಗೆ ಶಿಕ್ಷೆ ನೀಡುವ ಮಹತ್ವದ ಅಂಶ ಈ ವಿಧೇಯಕದಲ್ಲಿದೆ.
'ಪೋಷಕರ ಆರೈಕೆಗಾಗಿ ನೌಕರರ ಜವಾಬ್ದಾರಿ' ಎಂಬ ಮಸೂದೆಯನ್ನು ರಾಜ್ಯ ವಿಧಾನಸಭೆ ಅನುಮೋದಿಸಿದೆ. ಇದರ ಪ್ರಕಾರ, ಪೋಷಕರನ್ನು ಕಡೆಗಣಿಸುವ ನೌಕರಸ್ಥ ಮಕ್ಕಳ ಸಂಬಳದಲ್ಲಿ ಶೇಕಡಾ 15ರಷ್ಟು ಕಡಿತ ಮಾಡುವ ಅಧಿಕಾರವನ್ನು ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಪೋಷಕರನ್ನು ಬೆಂಬಲಿಸಲು ಕ್ರಮ: ಮಸೂದೆಯ ಮೇಲೆ ಮಾತನಾಡಿರುವ ಸಿಎಂ ರೇವಂತ್ ರೆಡ್ಡಿ ಅವರು, "ಪೋಷಕರು ತಮ್ಮ ಮಕ್ಕಳನ್ನು ಬೆಳೆಸಲು ತಮ್ಮ ಎಲ್ಲಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯಯಿಸುತ್ತಾರೆ. ಆದರೆ ಮಕ್ಕಳು ಸ್ವತಂತ್ರರಾದ ನಂತರ ತಮ್ಮ ಪೋಷಕರನ್ನು ನಿರ್ಲಕ್ಷಿಸುತ್ತಾರೆ. ವಯಸ್ಸಾದ ಪೋಷಕರಿಗೆ ಬೆಂಬಲ ಮತ್ತು ಭದ್ರತೆಯನ್ನು ಒದಗಿಸುವ ನಿರ್ದಿಷ್ಟ ಗುರಿಯೊಂದಿಗೆ ಈ ಮಸೂದೆಯನ್ನು ಪರಿಚಯಿಸಲಾಗಿದೆ" ಎಂದು ಅವರು ಸದನಕ್ಕೆ ತಿಳಿಸಿದರು.
"ಕೆಲವು ಮಕ್ಕಳ ನಡವಳಿಕೆ ಸಮಾಜಕ್ಕೆ ಅವಮಾನಕರ. ಪ್ರೀತಿ ಮತ್ತು ಕೌಟುಂಬಿಕ ಬಂಧಗಳಿಗೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಕಾನೂನು ಜಾರಿಗೆ ತರಬೇಕಾಗಿರುವುದು ನಿಜಕ್ಕೂ ವಿಷಾದಕರ. ತಮ್ಮ ಪೋಷಕರ ಯೋಗಕ್ಷೇಮವನ್ನು ನೋಡಿಕೊಳ್ಳಲು ವಿಫಲರಾದ ಯಾವುದೇ ವ್ಯಕ್ತಿ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಗುತ್ತದೆ. ಪೋಷಕರನ್ನು ನೋಡಿಕೊಳ್ಳಲು ಅಸಮರ್ಥನಾದ ವ್ಯಕ್ತಿ ಸಮಾಜದಲ್ಲಿ ಬದುಕಲು ಯಾವುದೇ ನೈತಿಕ ಹಕ್ಕಿಲ್ಲ. ಈ ಕಾನೂನು ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳಿಗೂ ಅನ್ವಯಿಸುತ್ತದೆ" ಎಂದು ರೆಡ್ಡಿ ಹೇಳಿದರು.
ಮಸೂದೆಯ ಪ್ರಮುಖ ಅಂಶಗಳು: ಸರ್ಕಾರಿ ನೌಕರರು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಈ ಮಸೂದೆ ಒಳಗೊಂಡಿದೆ. ಪೋಷಕರನ್ನು ನಿರ್ಲಕ್ಷಿಸುವ ಉದ್ಯೋಗಿಗಳಿಗೆ, ಅವರ ಮಾಸಿಕ ಸಂಬಳದ ಶೇ.15ರಷ್ಟು ಅಥವಾ ಗರಿಷ್ಠ 10 ಸಾವಿರ (ಯಾವುದು ಕಡಿಮೆಯೋ ಅದು) ಕಡಿತಗೊಳಿಸಿ ಅದನ್ನು ನೇರವಾಗಿ ಅವರ ಪೋಷಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಸರ್ಕಾರದ ಈ ಕ್ರಮವು ಕೇವಲ ಶಿಕ್ಷೆಯಾಗಿ ನೋಡದೆ, ನೈತಿಕ ಮತ್ತು ಕೌಟುಂಬಿಕ ಜವಾಬ್ದಾರಿಗಳನ್ನು ನೆನಪಿಸುವ ಉದ್ದೇಶವಾಗಿದೆ.
ಪೋಷಕರು ತಮ್ಮ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ತೊಂದರೆಗಳನ್ನು ಎದುರಿಸುತ್ತಿದ್ದರೆ ಅವರು ಜಿಲ್ಲಾಧಿಕಾರಿಗೆ ದೂರಿನ ಅರ್ಜಿಯನ್ನು ಸಲ್ಲಿಸಬೇಕು. ಬಳಿಕ ಆ ಅಧಿಕಾರಿ ವಿಚಾರಣೆ ನಡೆಸುತ್ತಾರೆ. ಉದ್ಯೋಗಿ ಮತ್ತು ಪೋಷಕರು ಇಬ್ಬರೂ ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡುತ್ತಾರೆ. ಅರ್ಜಿಯನ್ನು ಸ್ವೀಕರಿಸಿದ 60 ದಿನಗಳ ಒಳಗೆ ಸಮಸ್ಯೆಯನ್ನು ಪರಿಹರಿಸಬೇಕು. ವಿಚಾರಣೆಯ ನಂತರ, ಉದ್ಯೋಗಸ್ಥ ಮಕ್ಕಳು ತಪ್ಪೆಸಗಿದ್ದಲ್ಲಿ ಅವರ ವೇತನದಿಂದ ನಿಗದಿತ ಮೊತ್ತವನ್ನು ಕಡಿತಗೊಳಿಸಿ ಪೋಷಕರಿಗೆ ರವಾನಿಸಲು ಆದೇಶಿಸಬಹುದು.
60 ದಿನದಲ್ಲಿ ಅರ್ಜಿ ಇತ್ಯರ್ಥ: ಅಧಿಕಾರಿಯ ನಿರ್ಧಾರದ ಬಗ್ಗೆ ಅತೃಪ್ತಿ ಇದ್ದರೆ ಅಥವಾ ನಿಗದಿತ ಸಮಯದೊಳಗೆ ಪರಿಹಾರ ತಲುಪದಿದ್ದರೆ, ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾದ ಹಿರಿಯರ ಆಯೋಗವನ್ನು ಸಂಪರ್ಕಿಸಬಹುದು. ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಈ ಆಯೋಗದ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಾರೆ. ಮೇಲ್ಮನವಿ ಸಲ್ಲಿಸಲು 45 ದಿನಗಳ ಕಾಲಾವಕಾಶವಿದೆ. ಅರ್ಜಿಯನ್ನು ಸ್ವೀಕರಿಸಿದ 60 ದಿನಗಳಲ್ಲಿ ಆಯೋಗವು ಅಂತಿಮ ನಿರ್ಧಾರವನ್ನು ಪ್ರಕಟಿಸಬೇಕು. ಈ ಕಾರ್ಯವಿಧಾನವು ನೊಂದ ವ್ಯಕ್ತಿಗಳಿಗೆ ಸಿಗಬೇಕಾದ ನ್ಯಾಯ ವಿಳಂಬವಾಗದಂತೆ ನೋಡಿಕೊಳ್ಳಬೇಕು.
ಪೋಷಕರಲ್ಲಿ ಒಬ್ಬರು ನಿಧನರಾದರೂ, ಸಂಪೂರ್ಣ ನಿರ್ವಹಣಾ ಮೊತ್ತವನ್ನು ಬದುಕುಳಿದ ಪೋಷಕರಿಗೆ ರವಾನಿಸಬೇಕು. ಇಬ್ಬರೂ ಪೋಷಕರು ನಿಧನರಾದರೆ, ಸಂಬಂಧಪಟ್ಟ ಉದ್ಯೋಗಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಬೇಕು. ಪರಿಶೀಲನೆಯ ನಂತರ, ಅಧಿಕಾರಿ 30 ದಿನಗಳಲ್ಲಿ ವೇತನ ಕಡಿತವನ್ನು ರದ್ದುಗೊಳಿಸಲು ಆದೇಶ ನೀಡುತ್ತಾರೆ.
ನೈತಿಕ ಜವಾಬ್ದಾರಿಗೆ ಒತ್ತು: ಈ ಮಸೂದೆಯ ಪ್ರಾಥಮಿಕ ಉದ್ದೇಶವೆಂದರೆ ನೈತಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದು. ಆಧುನಿಕ ಸಮಾಜದಲ್ಲಿ, ವಿಭಕ್ತ ಕುಟುಂಬಗಳು ಹೆಚ್ಚುತ್ತಿರುವುದರಿಂದಾಗಿ, ವಯೋ ವೃದ್ಧರನ್ನು ನೋಡಿಕೊಳ್ಳುವ ಅಭ್ಯಾಸವು ಕಡಿಮೆಯಾಗುತ್ತಿದೆ. ನಗರಗಳಿಗೆ ಹೆಚ್ಚಿದ ವಲಸೆಯಿಂದಾಗಿ, ಹಳ್ಳಿಗಳಲ್ಲಿ ವೃದ್ಧರು ಪ್ರತ್ಯೇಕವಾಗಿ ವಾಸಿಸಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕುಟುಂಬ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದ ಭಾಗವಾಗಿ ಈ ಮಸೂದೆ ಪರಿಚಯಿಸುತ್ತಿದೆ.